ಯುಪಿಎ-2 ಸರಕಾರ ಕೊನೆಗೂ ಪೆಟ್ರೋಲ್, ಡೀಸೆಲ್ ಮತ್ತುತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಮತ್ತೊಮ್ಮೆ ಏರಿಸಿಯೇ ಬಿಟ್ಟಿದೆ. ಇತ್ತೀಚೆಗೆ ಅರೆಮನಸ್ಸಿನಿಂದಲಾದರೂ ಆಹಾರವಸ್ತುಗಳ ಬೆಲೆಯೇರಿಕೆ ಜನಸಾಮಾನ್ಯರನ್ನು ಬಹಳವಾಗಿ ತಟ್ಟಿದೆ ಎಂದು ಒಪ್ಪಿಕೊಂಡ ಸರಕಾರ ಬಜೆಟಿನಲ್ಲಿ ವಿಪರೀತ ಬೆಲೆಯೇರಿಕೆ, ಹಣದುಬ್ಬರವನ್ನು ತಡೆಯಲು ಕ್ರಮಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆಗೆ ತದ್ವಿರುದ್ಧವಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ಮತ್ತು ಕಚ್ಚಾತೈಲದ ಮೇಲೆ ಸೀಮಾ ಸುಂಕವನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ.50.74ರಿಂದ 53.71ಕ್ಕೆ ಏರಿದರೆ, ಡೀಸೆಲ್ ಬೆಲೆ ರೂ.37.06ರಿಂದ 39.87ಕ್ಕೆ ಏರಿದೆ. ಕರ್ನಾಟಕ ರಾಜ್ಯದಲ್ಲಿ ಆಗಲೇ ಬಸ್ ಪ್ರಯಾಣ ದರಗಳು ಏರಿವೆ.
ಸಹಜವಾಗಿಯೆ ಪೆಟ್ರೋಲಿಯಂ ದರ ಏರಿಕೆಗೆ ಎಲ್ಲೆಡೆಗಳಿಂದ ವಿರೋಧ ವ್ಯಕ್ತವಾಗಿದೆ
. ಸಂಸತ್ತಿನಲ್ಲಿ ಈ ಬಗ್ಗೆ ಕೋಲಾಹಲವೇ ಎದ್ದಿದೆ. ಯುಪಿಎ-2 ರ ಅಂಗಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂ.ಕೆ.ಕೂಡಾ ವಿರೋಧಿಸಬೇಕಾಗಿ ಬಂದಿದೆ. ಅವರು ಕೂಡ ಇದು ಹಣದುಬ್ಬರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಕರುಣಾನಿಧಿಯವರು ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಪಕ್ಷ ಬೆಲೆಯೇರಿಕೆಯ, ಅದರಲ್ಲೂ ಆಹಾರವಸ್ತುಗಳ ಬೆಲೆಯೇರಿಕೆಯ ಹೊಣೆಯನ್ನು ಮಿತ್ರಪಕ್ಷಗಳ ಮೇಲೆ ಹಾಕಿದೆ. ಒಂದು ಸಮ್ಮಿಶ್ರ ಸರಕಾರದಲ್ಲಿ ಸಂಯೋಜನೆಯಲ್ಲಿರುವ `ಕಷ್ಟ‘ಗಳು ಎಂದಿರುವ ಅದರ ಮುಖಪತ್ರಿಕೆ `ಕಾಂಗ್ರೆಸ್ ಸಂದೇಶ‘ ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ವಿವಿಧ ಇಲಾಖೆಗಳ ನಡುವೆ ಸರಿಯಾದ ಸಂಪರ್ಕದ ಕೊರತೆ ಇದಕ್ಕೆ ಕಾರಣ ಎಂದು ಸಮಜಾಯಿಷಿ ಕೊಡಲು ಯತ್ನಿಸಿದೆ. ಜತೆಗೇ ಜನರ ಭಾವನೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳ ಬಗ್ಗೆ ನಿಲರ್ಕ್ಷಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದೂ ಹೇಳಿದೆ.
ಆದರೆ ನಮ್ಮ ಆರ್ಥಿಕಜ್ಞ ಪ್ರಧಾನ ಮಂತ್ರಿಗಳು ಅಂತಹುದೇ ನಿರ್ಲಕ್ಷದ ಪ್ರದರ್ಶನ ನೀಡಿದ್ದಾರೆ
. ಇವು ಹಣದುಬ್ಬರ ಹೆಚ್ಚಿಸುವ ತೆರಿಗೆಗಳು ಅಲ್ಲ, ಹಣಕಾಸು ಕ್ರೋಡೀಕರಣದ `ದೂರಗಾಮಿ‘ ದೃಷ್ಟಿಯಿಂದ ಕೈಗೊಂಡ ಕ್ರಮಗಳು ಎಂದು ಸಮರ್ಥಿಸಿಕೊಳ್ಳುತ್ತಾ, ಆದ್ದರಿಂದ (ಯಾರು ಎಷ್ಟೇ ಹೇಳಿದರೂ) ಈ ಏರಿಕೆಗಳನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಹಣಕಾಸು ಮಂತ್ರಿಗಳು, ಹಣಕಾಸು ಕಾರ್ಯದರ್ಶಿಗಳೂ ಸಹಜವಾಗಿಯೇ ಅದಕ್ಕೆ ದನಿಗೂಡಿಸಿದ್ದಾರೆ. ಇದು ಜನಗಳ ಸಂಕಟಗಳನ್ನು ಮರೆತಿರುವ ನಿರ್ಲಕ್ಷ್ಯಪೂರ್ಣ ಸಮರ್ಥನೆ ಎಂದು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಈ ತೆರಿಗೆ ಏರಿಕೆಗಳಿಂದ ಸರಕಾರ ಗಳಿಸುವುದು 25000 ಕೋಟಿ ರೂ.ಗಳು, ಆದರೆ ಇದೇ ಬಜೆಟಿನಲ್ಲಿ5ಲಕ್ಷರೂ.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯದವರಿಗೆ ಆದಾಯ ತೆರಿಗೆ ದರಗಳನ್ನು ಇಳಿಸಿ 26000ಕೋಟಿ ರೂ. ಆದಾಯವನ್ನು ಕಳಕೊಳ್ಳುತ್ತಿರುವುದು ಎಂತಹ `ದೂರಗಾಮೀ‘ ದೃಷ್ಟಿ ಎಂದು ಅದು ಪ್ರಶ್ನಿಸಿದೆ. ಇದು ದೇಶದಲ್ಲಿ ಈಗ ಎಲ್ಲರೂ ಕೇಳುವ ಪ್ರಶ್ನೆ.
ಸೌಜನ್ಯ: ಜನಶಕ್ತಿ